Delhi Explosion| ಹತ್ತಕ್ಕೇರಿದ ಸಾವಿನ ಸಂಖ್ಯೆ|30 ಕ್ಕೂ ಹೆಚ್ಚು ಜನರಿಗೆ ಗಾಯ
Delhi Explosion| ಹತ್ತಕ್ಕೇರಿದ ಸಾವಿನ ಸಂಖ್ಯೆ|30 ಕ್ಕೂ ಹೆಚ್ಚು ಜನರಿಗೆ ಗಾಯ.
ನವದೆಹಲಿ/ಬೆಂಗಳೂರು: ರಾಷ್ಟ್ರರಾಜಧಾನಿಯ ಹೃದಯಭಾಗದಲ್ಲಿಂದು ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟ (Delhi Explosion) ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿ ವಿಶೇಷ ಘಟಕ ಅಧಿಕಾರಿಗಳ ತಂಡ ಓರ್ವ ಶಂಕಿತನ್ನ ವಶಕ್ಕೆ ಪಡೆದಿದೆ. ವಿಚಾರಣೆ ಬಳಿಕವೇ ಸ್ಪೋಟಕ ರಹಸ್ಯ ಹೊರಬೀಳಬೇಕಿದೆ.
ಕೆಂಪು ಕೋಟೆ ಸಮೀಪದ ಲಾಲ್ ಕಿಲಾ ಮೆಟ್ರೋ ನಿಲ್ದಾಣ (Lal Quila Metro Station) ಗೇಟ್ ಸಂಖ್ಯೆ-1ರ ಬಳಿ ಸೋಮವಾರ ಸಂಜೆ 6:45 ರಿಂದ 7 ಗಂಟೆ ಅವಧಿಯಲ್ಲಿ ಸ್ಫೋಟ ಸಂಭವಿಸಿದ್ದು, ಸಾವಿನ ಸಂಖ್ಯೆ ಈವರೆಗೆ 10ಕ್ಕೆ ಏರಿಕೆಯಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ. ಇದು ಬಾಂಬ್ ಸ್ಫೋಟವೇ ಅಥವಾ ಸಿಎನ್ಜಿ ಸ್ಫೋಟವೇ ಏನು ಅನ್ನೋದು ನಿಖರವಾಗಿ ಗೊತ್ತಾಗ್ತಿಲ್ಲ. ದೆಹಲಿ ಪೊಲೀಸರು, ಸಿಆರ್ಪಿಎಫ್ ತಂಡ ಘಟನಾ ಸ್ಥಳದಲ್ಲಿ ಇದ್ದು, ಇಂಚಿಂಚೂ ಶೋಧ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಕೂಡ ಧಾವಿಸಿದ್ದು, ಸ್ಫೋಟಕ್ಕೆ ಕಾರಣ ಪತ್ತೆಹೆಚ್ಚುವ ಕಾರ್ಯದಲ್ಲಿ ತೊಡಗಿದೆ.
ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ :-
ರಾಷ್ಟ್ರರಾಜಧಾನಿಯ ಹೃದಯಭಾಗದಲ್ಲಿಂದು ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟ (Delhi Explosion) ಪ್ರಕರಣದ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಗೃಹಸಚಿವರು, ಇಂದು ಸಂಜೆ 7 ಗಂಟೆ ಸುಮಾರಿಗೆ ದೆಹಲಿಯ ಕೆಂಪು ಕೋಟೆ ಬಳಿಯ ಸುಭಾಷ್ ಮಾರ್ಗದ ಟ್ರಾಫಿಕ್ ಸಿಗ್ನಲ್ನಲ್ಲಿ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಖಚಿತಪಡಿಸಿದ್ದಾರೆ. ಅಲ್ಲದೇ ಈ ಸ್ಫೋಟದಲ್ಲಿ ಕೆಲವು ಪಾದಚಾರಿಗಳು ಗಾಯಗೊಂಡಿದ್ದಾರೆ, ಕೆಲ ವಾಹನಗಳು ಹಾನಿಗೊಳಗಾಗಿವೆ. ಪ್ರಾಥಮಿಕ ವರದಿಗಳ ಪ್ರಕಾರ, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.
ಸ್ಫೋಟದ ಮಾಹಿತಿ ಬಂದ ಹತ್ತೇ ನಿಮಿಷಗಳಲ್ಲಿ ದೆಹಲಿ ಕ್ರೈಂ ಬ್ರ್ಯಾಂಚ್ ಮತ್ತು ದೆಹಲಿ ಸ್ಪೆಷಲ್ ಸೆಲ್ನ ತಂಡಗಳು ಸ್ಥಳಕ್ಕೆ ಭೇಟಿ ನೀಡಿವೆ. ವಿಧಿವಿಜ್ಞಾನ ಪ್ರಯೋಗಾಲಯ ತಂಡದೊಂದಿಗೆ ಎನ್ಎಸ್ಜಿ ಮತ್ತು ಎನ್ಐಎ ತಂಡಗಳೂ ಸ್ಥಳಕ್ಕೆ ಆಗಮಿಸಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ಪ್ರಾರಂಭಿಸಿವೆ ಎಂದು ಮಾಹಿತಿ ನೀಡಿದ್ದಾರೆ.
ಸುತ್ತಮುತ್ತ ಪ್ರದೇಶಗಳಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನ ಪರಿಶೀಲಿಸಲು ಆದೇಶಿಸಲಾಗಿದೆ. ಅಲ್ಲದೇ ನಾನು ದೆಹಲಿ ನಗರ ಪೊಲೀಸ್ ಮತ್ತು ವಿಶೇಷ ಸೆಲ್ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ. ದೆಹಲಿ ಸಿಪಿ ಮತ್ತು ವಿಶೇಷ ಶಾಖೆಯ ಉಸ್ತುವಾರಿ ಸ್ಥಳದಲ್ಲಿದ್ದಾರೆ.
ಎಲ್ಲಾ ಸಾಧ್ಯತೆಗಳನ್ನ ಪರಿಗಣಿಸಿ ಸಂಪೂರ್ಣ ತನಿಖೆ ನಡೆಸುತ್ತೇವೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ ಸಾರ್ವಜನಿಕರ ಮುಂದಿಡುತ್ತೇವೆ ಎಂದು ಹೇಳಿದ್ದಾರೆ.
ಲೋಕ್ನಾಯಕ್ ಆಸ್ಪತ್ರೆಗೆ ದಿಢೀರ್ ಭೇಟಿ.
ಘಟನಾ ಸ್ಥಳದ ಬಗ್ಗೆ ದೆಹಲಿ ಪೊಲೀಸ್ ಇಲಾಖೆ ಹಾಗೂ ವಿಶೇಷ ಘಟಕದಿಂದ ಮಾಹಿತಿ ಪಡೆದ ಅಮಿತ್ ಶಾ, ಕೆಲವೇ ಕ್ಷಣಗಳಲ್ಲಿ ಲೋಕನಾಯಕ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕಾರು ಸ್ಫೋಟದ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ್ದು, ವೈದ್ಯರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ.