Uttara kannada :ಉತ್ತರ ಕನ್ನಡ ಜಿಲ್ಲೆಯ ಈ ಭಾಗದಲ್ಲಿ ಕುಸಿಯಲಿದೆ ಭೂಮಿ! ಎಲ್ಲಿ ವಿವರ ನೋಡಿ
Uttara kannada :ಉತ್ತರ ಕನ್ನಡ ಜಿಲ್ಲೆಯ ಈ ಭಾಗದಲ್ಲಿ ಕುಸಿಯಲಿದೆ ಭೂಮಿ! ಎಲ್ಲಿ ವಿವರ ನೋಡಿ
ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ 439 ಭೂ ಭಾಗಗಳು ಅತೀ ಸೂಕ್ಷ ಭೂ ಕುಸಿತ (landslide) ವಲಯ ಎಂದು ನಾಲ್ಕು ವರ್ಷದ ಹಿಂದೆಯೇ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ವರದಿ ನೀಡಿತ್ತು. ಇದರ ಬೆನ್ನಲ್ಲಿ 2025 ರ ಮೇ ಅಂತ್ಯದಲ್ಲಿ ಜಿ.ಎಸ್.ಐ ಮತ್ತೊಂದು ಸರ್ವೆ ವರದಿಯನ್ನು ನೀಡಿದ್ದು ಜಿಲ್ಲೆಯ ಶೇ 21 ಪ್ರದೇಶ ಮಧ್ಯಮ ಹಾಗೂ ತೀವ್ರ ಗುಡ್ಡ ಕುಸಿತ ವಲಯ ಎಂದು ವರದಿ ಸಲ್ಲಿಸಿದೆ.
ಜಿಲ್ಲಾಡಳಿತದ ಮನವಿ ಮೇರೆಗೆ ಮೇ ತಿಂಗಳಲ್ಲಿ ಜಿಲ್ಲೆಯ ನಾಲ್ಕು ಗುಡ್ಡ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿದ ಜಿಎಸ್ಐ ಕರ್ನಾಟಕ ಗೋವಾ ವಲಯದ ಹಿರಿಯ ಭೂ ವಿಜ್ಞಾನಿಗಳಾದ ರಾಹುಲ್ ವಡಕ್ಕೆದಾಥ್ ಹಾಗೂ ಅಚನ್ ಕೊನ್ಯಾಕ್ ಅವರು ಜಿಲ್ಲಾಡಳಿತಕ್ಕೆ ಮೇ ಅಂತ್ಯಕ್ಕೆ ವರದಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:-Shirur: ಶಿರೂರು ಗುಡ್ಡ ಕುಸಿಯುವ ಹಿನ್ನಲೆ- ನಿಷೇಧಾಜ್ಞೆ ಜಾರಿ
ಉತ್ತರ ಕನ್ನಡ ಜಿಲ್ಲೆಯು ರಾಷ್ಟ್ರೀಯ ಗುಡ್ಡ ಕುಸಿತ ಸಾಧ್ಯತೆ ಕಾರ್ಯಕ್ರಮ (ಎನ್ಎಲ್ಎಸ್ಎಂ) ವ್ಯಾಪ್ತಿಯಲ್ಲಿ ಬರಲಿದೆ. ಎನ್ಎಲ್ಎಎಂ ನಕ್ಷೆಯಂತೆ ಜಿಲ್ಲೆಯ 1,746 ಚದರ ಕಿಮೀ ಪ್ರದೇಶವು ಮಧ್ಯಮ ಹಾಗೂ ಭಾರಿ ಗುಡ್ಡ ಕುಸಿತದ ವ್ಯಾಪ್ತಿಗೆ ಬರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅದರಲ್ಲಿ ಜಿಲ್ಲೆಯ ಪಶ್ಚಿಮ ಭಾಗದ ಕರಾವಳಿ ಪ್ರದೇಶವು ಗುಡ್ಡದ ಇಳಿಜಾರು ಪ್ರದೇಶ ಹೊಂದಿದ್ದು, ಹೆಚ್ಚಿನ ಭೂ ಕುಸಿತ ಅಪಾಯ ಹೊಂದಿದೆ. ಪೂರ್ವ ಭಾಗದ ಮಣ್ಣಿನ ಸ್ವರೂಪ ವಿಭಿನ್ನವಾಗಿದ್ದು, ಕಡಿಮೆ ಅಪಾಯ ಹೊಂದಿದೆ ಎಂದು ವಿವರಿಸಲಾಗಿದೆ. ಅಲ್ಲದೆ, ಜಿಲ್ಲೆಯ ಗುಡ್ಡ ಕುಸಿತದ ಭಾರಿ ಅಪಾಯ ಹೊಂದಿರುವ ನಕ್ಷೆಯನ್ನು ಬಿಡುಗಡೆ ಮಾಡಲಾಗಿದೆ.
ಗುಡ್ಡ ಕುಸಿಯುವ ಪ್ರದೇಶಗಳಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ವರದಿ ಪ್ರಕಾರ , ಕುಮಟಾ ತಾಲೂಕಿನ ಬರ್ಗಿಯ ಕುರಿಗದ್ದೆ ,ಕುಮಟಾ ತಾಲೂಕಿನ ಗೋಕರ್ಣ ಭಾಗದ ತೊರ್ಕೆ ಗ್ರಾಮ,ಹೊನ್ನಾವರದ ಆಲಂಕಿ ಗ್ರಾಮದ ಡಾ.ಬಿ.ಆರ್ .ಅಂಬೇಡ್ಕರ್ ರೆಸಿಡೆಂಷಿಯಲ್ ಸ್ಕೂಲ್ , ಯಲ್ಲಾಪುರ ಕೊಡ್ಲಗದ್ದೆ ಭಾಗದಲ್ಲಿ ಮಣ್ಣು ಹೆಚ್ಚು ಸಡಿಲವಾಗಿದ್ದು ,ಕುಮಟಾದ ತೊರ್ಕೆಯಲ್ಲಿ ಅತೀ ಹೆಚ್ಚು ಮಣ್ಣು ಸಡಿಲವಾಗಿದ್ದು ಈ ಭಾಗದಲ್ಲಿ ಯಾವಾಗ ಬೇಕಾದರೂ ಮಣ್ಣು ಕುಸಿಯುವ ಎಚ್ಚರಿಕೆ ನೀಡಿದೆ. ಇನ್ನು ಅರಣ್ಯ ಇಲಾಖೆ ಸಚಿವ ಈಶ್ವರ್ ಕಂಡ್ರೆ ಸಹ ಇದೀಗ ಪಶ್ಚಿಮ ಘಟ್ಟ ಭಾಗದ ಧಾರಣ ಸಾಮರ್ಥ್ಯದ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಮೂರು ತಿಂಗಳ ಗಡವು ಸಹ ನೀಡಿದ್ದಾರೆ.
ಕುಟುಂಬಗಳ ಸ್ಥಳಾಂತರ ಮಾಡಿಲು ಸೂಚನೆ
ಕುಮಟಾ ತೊರ್ಕೆ ಹಾಗೂ ಬರ್ಗಿ ಕುರಿಗದ್ದೆ ಗ್ರಾಮದಲ್ಲಿ ಗುಡ್ಡ ಕುಸಿತದ ಸಾಧ್ಯತೆ ಹೆಚ್ಚಿದ್ದು, ಅಲ್ಲಿನ ಕುಟುಂಬಗಳನ್ನು ಸ್ಥಳಾಂತರ ಮಾಡಬೇಕು ಎಂದು ಜಿಎಸ್ಐ ತಜ್ಞರು ಸೂಚನೆ ನೀಡಿದ್ದಾರೆ. ಎರಡೂ ಕಡೆ 2024ರ ಜುಲೈ ಹಾಗೂ ಆಗಸ್ಟ್ನಲ್ಲಿ ಗುಡ್ಡ ಕುಸಿತವಾಗಿದ್ದು, ಇನ್ನೂ ಜರಿದು ಬೀಳುವ ಸಾಧ್ಯತೆ ಇದೆ ಎಂದಿದ್ದಾರೆ. ಅಲ್ಲದೆ, ತಜ್ಞರು ಜಿಲ್ಲಾಡಳಿತದ ಮನವಿ ಮೇರೆಗೆ ಹೊನ್ನಾವರ ಅಳ್ಳಂಕಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಹಾಗೂ ಯಲ್ಲಾಪುರದ ಕೊಡ್ಲಗದ್ದೆ ಗ್ರಾಮಗಳಿಗೂ ಭೇಟಿ ನೀಡಿದ್ದರು. ಅಳ್ಳಂಕಿ ಹಾಗೂ ಕೊಡಗದ್ದೆಯಲ್ಲಿ ಸದ್ಯ ಸ್ಥಳಾಂತರದ ಅವಶ್ಯಕತೆ ಇಲ್ಲ ಎಂದು ತಿಳಿಸಲಾಗಿದೆ. ಕೆಲವೆಡೆ ಗೇಬಿಯನ್ ವಾಲ್ (ಸಿಮೆಂಟ್ ತಡೆಗೋಡೆ), ಹಂತ. ಹಂತವಾಗಿ ಗುಡ್ಡ ಕತ್ತರಿಸುವುದು ಹಾಗೂ ಗುಡ್ಡಗಳ ಮೇಲೆ ಸಣ್ಣ ಗಿಡಗಳನ್ನು ಬೆಳೆಸುವುದು ಮುಂತಾದ ಶಿಫಾರಸುಗಳನ್ನು ಮಾಡಲಾಗಿದೆ
ಜಿಲ್ಲಾಧಿಕಾರಿ ಏನಂದ್ರು?
ಸಾರ್ವಜನಿಕರ ದೂರಿನ ಮೇರೆಗೆ ನಾವು ಜಿಲ್ಲೆಯ ನಾಲ್ಕು ಪ್ರದೇಶಗಳ ಗುಡ್ಡ ಕುಸಿತದ ಸಾಧ್ಯತೆಯ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ಜಿಎಸ್ಐಗೆ ಮನವಿ ಮಾಡಿದ್ದೆವು. ಅದರಂತೆ ಅವರು ಸ್ಥಳ ಭೇಟಿ ಮಾಡಿ ವರದಿ ನೀಡಿದ್ದಾರೆ. ಅವರು ನೀಡಿರುವ ಅಪಾಯಕಾರಿ ಸ್ಥಳಗಳಲ್ಲಿ ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್ ನೀಡಿದ್ದೇವೆ ಎಂದಿದ್ದಾರೆ.