Sirsi: ಮತ್ತಿಘಟ್ಟ ರಸ್ತೆ ನಿರ್ಮಾಣಕ್ಕೆ ಪಟ್ಟು ಹಿಡಿದ ಅನಂತಮೂರ್ತಿ- ಸ್ಥಳದಲ್ಲೇ ಕಾರ್ಯಾನುಮೋದನೆ ನೀಡಿದ ಜಿಲ್ಲಾಧಿಕಾರಿ.
Sirsi: ಮತ್ತಿಘಟ್ಟ ರಸ್ತೆ ನಿರ್ಮಾಣಕ್ಕೆ ಪಟ್ಟು ಹಿಡಿದ ಅನಂತಮೂರ್ತಿ- ಸ್ಥಳದಲ್ಲೇ ಕಾರ್ಯಾನುಮೋದನೆ ನೀಡಿದ ಜಿಲ್ಲಾಧಿಕಾರಿ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi) ತಾಲೂಕಿನ ಮತ್ತಿಘಟ್ಟ ಕೆಳಗಿನಕೇರಿ ಜನರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಜಿಲ್ಲಾಕೇಂದ್ರ ಕಾರವಾರದಲ್ಲಿ ಪ್ರತಿಭಟನೆ ಶುರು ಮಾಡಿದ್ದು, ಪ್ರತಿಭಟನೆಗೂ ಮುನ್ನವೇ ಜಿಲ್ಲಾಡಳಿತ ಸಂದಾನ ಸಭೆ ನಡೆಸಿದೆ. ಸದ್ಯ 5 ಲಕ್ಷ ರೂ ವೆಚ್ಚದಲ್ಲಿ ತುರ್ತಾಗಿ ರಸ್ತೆ ಕಾಮಗಾರಿ ನಡೆಸುವ ವಾಗ್ದಾನದ ಹಿನ್ನಲೆ ಹೋರಾಟಗಾರರು ಪ್ರತಿಭಟನೆ ಹಿಂಪಡೆದಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅನಂತಮೂರ್ತಿ ಹೆಗಡೆ ಪ್ರತಿಭಟನೆ ಶುರು ಮಾಡಿದರು. ತಕ್ಷಣ ಶಿರಸಿ ಲೋಕೋಪಯೋಗಿ ಇಲಾಖೆ ಅಭಿಯಂತರ ಬಸವರಾಜ ಬಳ್ಳಾರಿ ಅವರನ್ನು ಕರೆಯಿಸಿದ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾರವರು ಊರಿನವರ ಸಮಸ್ಯೆ ಬಗ್ಗೆ ವರದಿಪಡೆದರು.
ಇದಾದ ನಂತರ ಪ್ರತಿಭಟನಾಕಾರರನ್ನು ಕರೆಯಿಸಿ ಮಾತನಾಡಿಸಿದರು. `ಮಳೆಗಾಲ ಶುರುವಾಗುವ ಮುನ್ನ 5 ಲಕ್ಷ ರೂ ವೆಚ್ಚದಲ್ಲಿ ರಸ್ತೆ ರಿಪೇರಿ ಮಾಡಿಸುವುದು. ಮಳೆ ಮುಗಿದ ನಂತರ ಸಿಮೆಂಟ್ ರಸ್ತೆ ಮಾಡುವುದು' ಎನ್ನುವುದರ ಬಗ್ಗೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. `ಈ ಬಗ್ಗೆ ಲಿಖಿತವಾಗಿ ತಿಳಿಸಬೇಕು' ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದು, ಉತ್ತರ ಕನ್ನಡ ಜಿಲ್ಲಾಡಳಿತ ಅದಕ್ಕೂ ಒಪ್ಪಿಗೆ ಸೂಚಿಸಿತು.
ಈ ನಡುವೆ ಊರಿನವರ ಸಮಸ್ಯೆ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳ ಜೊತೆ ಫೋನಿನಲ್ಲಿ ಮಾತನಾಡಿದರು. `ಶಿರಸಿ ಅಂಕೋಲಾ ತಾಲೂಕಿನ ಗಡಿ ಪ್ರದೇಶವಾದ ಮತ್ತಿಘಟ್ಟ ಕೆಳಗಿನ ಕೇರಿ ಸಮೀಪದ ಹಲವು ಊರುಗಳು ಕನಿಷ್ಟ ಸೌಕರ್ಯವೂ ಇಲ್ಲದೇ ನಲುಗಿದೆ.
ಇಲ್ಲಿನ ಜನ ದಟ್ಟ ಕಾಡಿನೆ ಮಧ್ಯೆ ನಿತ್ಯವೂ ಭಯದ ಬದುಕು ಸಾಗಿಸುತ್ತಿದ್ದಾರೆ ಎಂಬ ವಿಷಯವನ್ನು ಮನವರಿಕೆ ಮಾಡಿದರು. ಮಹಿಳೆಯರಿಗೆ ಸರ್ಕಾರ ನೀಡಿದ ಉಚಿತ ಬಸ್ ಪ್ರಯಾಣ ಮಾಡಲು ಐದು ಕಿಮೀ ಘಟ್ಟ ಹತ್ತಬೇಕು.

ಗ್ರಾಮಗಳಿಗೆ ಇರುವ ಒಂದು ರಸ್ತೆ ಕಳೆದ ಮಳೆಗಾಲದಲ್ಲಿ ಭೂ ಕುಸಿತವಾಗಿ ಕಂದಕವಾಗಿ ನಿರ್ಮಾಣಗೊಂಡಿದ್ದರೂ ಜನಪ್ರತಿನಿಧಿಗಳು ಒಬ್ಬರೂ ಬರಲಿಲ್ಲ. ಶಿರಸಿ ಶಾಸಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವ ಬಗ್ಗೆ ಅನಂತಮೂರ್ತಿ ಹೆಗಡೆ ಅಸಮಧಾನವ್ಯಕ್ತಪಡಿಸಿದರು.
ಕಳೆದ ಮಳೆಗಾಲದ 15 ದಿನಗಳ ಕಾಲ ಊರು ದ್ವೀಪವಾಗಿತ್ತು. ಮರದಿಂದ ಬಿದ್ದವನನ್ನು ಕಂಬಳಿಯಲ್ಲಿ ಹೆಗಲಮೇಲೆ ಹೊತ್ತೊಯ್ದರೂ ಆತ ಬದುಕುಳಿಯಲಿಲ್ಲ ಎಂಬ ಸಂಗತಿ ಪ್ರತಿಭಟನೆಯಲ್ಲಿ ಪ್ರತಿಧ್ವನಿಸಿತು. ಮಾಡನಮನೆ, ಉಂಬಳಗೇರಿ, ಗುಂಡಪ್ಪೆ, ನರಸೆಬೈಲ್ ಮೊದಲಾದ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.
ಜಿಲ್ಲಾಧಿಕಾರಿಗಳ ಆದೇಶದ ಪತ್ರದಲ್ಲೆನಿದೆ ?
ಶಿರಸಿ-ಅಂಕೋಲಾ ತಾಲ್ಲೂಕಿನ ಗಡಿ ಪ್ರದೇಶ ಮತ್ತಿಘಟ್ಟ ಕೆಳಗಿನಕೇರಿ ಸಮೀಪದ ಕುಗ್ರಾಮಗಳಾದ ಮಾಡನಮನೆ, ಉಂಬಳಕೇರಿ, ನರಸೇಬೈಲ್, ಗುಂಡಪ್ಪ, ಸೇರಿದಂತೆ ಆರಕ್ಕೂ ಅಧಿಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ 2024 ರಲ್ಲಿ ಮಳೆಯಿಂದ ಭೂಕುಸಿತವಾಗಿ ಸಂಪರ್ಕವೇ ಕಡಿತಗೊಂಡಿದ್ದು, ಮುಂಬರುವ ಮಳೆಗಾಲದಲ್ಲಿ ಸದ್ರಿ ರಸ್ತೆಯಲ್ಲಿ ಹೆಚ್ಚಿನ ಭೂಕುಸಿತವಾಗುವ ಸಾಧ್ಯತೆಯಿರುವ ಬಗ್ಗೆ ಮತ್ತಿಘಟ್ಟ ಕೆಳಗಿನಕೇರಿ ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆ ದುರಸ್ಥಿ ಪಡಿಸುವ ಬಗ್ಗೆ ಕೋರಿಕೆ ಸಲ್ಲಿಸಿರುತ್ತಾರೆ.
ಮುಂಬರುವ ಮಳೆಗಾಲದಲ್ಲಿ ಪ್ರಕೃತಿ ವಿಕೋಪದಿಂದ ಸದ್ರಿ ರಸ್ತೆಯು ಭೂಕುಸಿತವಾಗಿ ಸಾರ್ವಜನಿಕ ಸಂಪರ್ಕ ಕಡಿತಗೊಂಡು ಸಾರ್ವಜನಿಕ ಜನ ಜೀವನಕ್ಕೆ ಹಾನಿಯಾಗುವ ಸಾಧ್ಯತೆಯಿರುವುದರಿಂದ ಮುಂಗಾರಿನ ಪೂರ್ವದಲ್ಲಿಯೇ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಇಲಾಖಾ ವತಿಯಿಂದ ಕಾಮಗಾರಿ ಕೈಗೊಂಡು ಸಾರ್ವಜನಿಕ ಜೀವನಕ್ಕೆ ಹಾಗೂ ಸಾರ್ವಜನಿಕ ಸಂಪರ್ಕಕ್ಕೆ ವ್ಯತ್ಯಯವಾಗದಂತೆ ಸದ್ರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಆದೇಶಿಸಿದೆ.
ಈ ಬಗ್ಗೆ ಸದ್ರಿ ವ್ಯಾಪ್ತಿಯ ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿಯನ್ನು ಕೈಗೊಳ್ಳತಕ್ಕದ್ದು ಹೆಚ್ಚಿನ ಕಾಮಗಾರಿಗೆ ತಗಲುವ ಅನುದಾನವನ್ನು MPLADS/KLLADS ರಡಿ 2025-26 ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಸದ್ರಿ ಕಾಮಗಾರಿಯನ್ನು ಅಳವಡಿಸಿ ಪೂರ್ಣಗೊಳಿಸಲು ಸೂಚಿಸಿದೆ.
ಈ ಆದೇಶದ ಅನುಸರಣೆಯನ್ನು ಶಿರಸಿಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಖಚಿತಪಡಿಸಿಕೊಳ್ಳಬೇಕು. ಮೇಲಿನ ಆದೇಶವನ್ನು ಪಾಲಿಸಲು ಯಾವುದೇ ಅಧಿಕಾರಿಯಿಂದ ಯಾವುದೇ ಅಡಚಣೆ, ಪ್ರತಿರೋಧ ಅಥವಾ ನಿರಾಕರಣೆ ಉಂಟಾದರೆ ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಸೆಕ್ಷನ್ 51 ರಿಂದ 60 ರ ಅಡಿಯಲ್ಲಿ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಈ ಆದೇಶವನ್ನು ಏಪ್ರಿಲ್ 28, 2025 ರಂದು ನನ್ನ ಸಹಿ ಮತ್ತು ಮೊಹರು ಅಡಿಯಲ್ಲಿ ಹೊರಡಿಸಲಾಗಿದೆ ಮತ್ತು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.
ಧರಣಿಯಲ್ಲಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಬಳ್ಳಾರಿ, ಊರಿನ ಪ್ರಮುಖರಾದ ನಾರಾಯಣ ಹೆಗಡೆ ವಿನಯ್ ಹೆಗಡೆ, ಜಯಭಾರತಿ ಭಟ್, ನಾಗೇಶ ಸಿದ್ದಿ, ದಾಮೋದರ ಸಿದ್ದಿ, ಲತಾ ಶಂಕರ ಸಿದ್ದಿ, ರೇಣುಕಾ ಗೋಪಾಲ್ ಸಿದ್ದಿ, ದತ್ತಾತ್ರೇಯ ಭಟ್, ಗಣಪತಿ ನಾಯ್ಕ್ , ನಾಗರಾಜ್ ಸುಬ್ರಾಯ ಹೆಗಡೆ, ವಿಶ್ವೇಶ್ವರ ಗಣಪತಿ ಹೆಗಡೆ ಇದ್ದರು.
ಒಟ್ಟಿನಲ್ಲಿ ಹಲವು ವರ್ಷದ ರಸ್ತೆ ದುರಸ್ತಿ ಬೇಡಿಗೆ ಇದೀಗ ಈಡೇರುವಂತಾಗಿದೆ.