BJP ರಾಜ್ಯಾಧ್ಯಕ್ಷರ ಬದಲಾವಣೆಗಿಲ್ಲ ಮುಹೂರ್ತ! ಏನಿದೆ ದೆಹಲಿ ರಾಜಕಾರಣದ ನೆಡೆ ಗೊತ್ತಾ?
BJP ರಾಜ್ಯಾಧ್ಯಕ್ಷರ ಬದಲಾವಣೆಗಿಲ್ಲ ಮುಹೂರ್ತ! ಏನಿದೆ ದೆಹಲಿ ರಾಜಕಾರಣದ ನೆಡೆ ಗೊತ್ತಾ?
ಬೆಂಗಳೂರು/ದೆಹಲಿ:- ರಾಜ್ಯದ ಬಿಜೆಪಿ ಪಾಳಯದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯದ್ದೇ ಸದ್ದು, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರನ್ನ ಬದಲಾವಣೆ ಮಾಡಬೇಕು ಎಂಬುದು ಹಲವು ಅತೃಪ್ತ ನಾಯಕರ ಪಟ್ಟು .ಹೀಗಾಗಿ ಹೈಕಮಾಂಡ್ ನತ್ತ ನಾಯಕರ ದಂಡು ಮುಖ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಅಧಿಕೃತ ಘೋಷಣೆಗೆ ದಿನಗಣನೆ ನಡೆಯುತ್ತಿರುವ ಕಾರಣ ಹಿನ್ನೆಲೆಯಲ್ಲಿ ಹಾಗೂ ಮುನ್ನೆಲೆಯಲ್ಲಿ ಸಾಕಷ್ಟು ಕಸರತ್ತುಗಳು ನಡೆದಿವೆ. ಕೇಂದ್ರ ಸಚಿವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಪ್ರಯತ್ನದ ಜೊತೆಗೆ ರಾಜ್ಯ ನಾಯಕರಿಂದ ವರಿಷ್ಠರು ಮಾಹಿತಿ ಸಂಗ್ರಹದ ಕೆಲಸವನ್ನೂ ನಡೆಸಿದ್ದಾರೆ. ಈ ಮಧ್ಯೆ ಮೂರು ದಿನಗಳಿಂದ ದೆಹಲಿಯಲ್ಲೇ ಇರುವ ವಿಪಕ್ಷ ನಾಯಕ ಅಶೋಕ್ ನಡೆ ಕುತೂಹಲವನ್ನು ಹೆಚ್ಚಿಸಿದೆ.
ಬಾಕಿ ಇರುವ ಆರೇಳು ರಾಜ್ಯ ಘಟಕಗಳ ಜೊತೆಯಲ್ಲೇ ಕರ್ನಾಟಕ ಬಿಜೆಪಿ (BJP) ಅಧ್ಯಕ್ಷರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡುವುದು ಖಚಿತವಾಗಿದೆ. ಯಾವಾಗ ಮತ್ತು ಯಾರು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲವಾದರೂ ಜುಲೈ ಎರಡನೇ ವಾರದೊಳಗೆ ಈ ಪ್ರಕ್ರಿಯೆ ಮುಗಿಯುವುದು ನಿಚ್ಚಳವಾಗಿದೆ.
ಇದನ್ನೂ ಓದಿ:-Karnataka :ರಷ್ಯ -ಉಕ್ರೇನ್ ಯುದ್ಧದಲ್ಲಿ ಮಡಿದ ವಿದೇಶಿ ಯೋಧನಿಗೆ ಗೋಕರ್ಣದಲ್ಲಿ ವಿಡಿಯೋ ಕಾಲ್ ಮೂಲಕ ಅಪರ ಕಾರ್ಯ ! ಏನಿದು ವಿಶೇಷ
ಇನ್ನು ರಾಜ್ಯಾಧ್ಯಕ್ಷ ಸ್ಥಾನದ ಕುರಿತಾಗಿ ಕಳೆದ ಆರು ತಿಂಗಳಿನಿಂದ ಕೆಲವು ಗಂಭೀರ ಬೆಳವಣಿಗೆಗಳು ನಡೆದಿರುವ ಬಗ್ಗೆ ಕುತೂಹಲಕರ ಮಾಹಿತಿಗಳು ಹೊರಬಿದ್ದಿವೆ. ಬಿಜೆಪಿಯಲ್ಲಿ ಆಗಾಗ ಸಕ್ರಿಯವಾಗಿರುವ ತಟಸ್ಥ ಬಣ ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೇರಿಸುವ ನಿಟ್ಟಿನಲ್ಲಿ ತೀವ್ರ ಪ್ರಯತ್ನವನ್ನೂ ನಡೆಸಿತ್ತು. ಕೇಂದ್ರ ಸಚಿವ ಸ್ಥಾನದ ಜೊತೆಗೆ ಅಧ್ಯಕ್ಷ ಸ್ಥಾನ ಎಂದಾದರೆ ಒಪ್ಪಿಕೊಳ್ಳಬಹುದು ಎಂಬ ಮನಸ್ಥಿತಿಗೂ ಸೋಮಣ್ಣ ತಲುಪಿದ್ದರು. ಆದರೆ, ಅವರಿಗೆ ಕೇಂದ್ರ ಸಚಿವರಾಗಿಯೇ ಒಳ್ಳೆಯ ಕೆಲಸ ಮಾಡುವಂತೆ ಹೈಕಮಾಂಡ್ ಸೂಚಿಸಿದ ಕಾರಣ ಆ ಪ್ರಸ್ತಾಪ ಅಲ್ಲಿಗೆ ಕೊನೆಗೊಂಡಂತಾಗಿದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ ವಿಜಯೇಂದ್ರ (BY Vijayendra) ಬದಲಾಗಿ ಬೇರೆಯವರನ್ನು ನೇಮಿಸಲು ಹೈಕಮಾಂಡ್ ಆರು ತಿಂಗಳ ಹಿಂದೆ ಗಂಭೀರ ಚಿಂತನೆ ನಡೆಸಿತ್ತು ಎಂಬ ಮಾಹಿತಿಯೂ ಈಗ ಲಭ್ಯವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿಯೊಬ್ಬರು ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.
ವಿಜಯೇಂದ್ರ ಹೆಸರಿಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಕೋಟಾದಲ್ಲಿ ವಿ. ಸುನೀಲ್ ಕುಮಾರ್, ಲಿಂಗಾಯತ ಮತ್ತು ಪಂಚಮಸಾಲಿ ಕೋಟಾದಲ್ಲಿ ಅರವಿಂದ ಬೆಲ್ಲದ್ ಮತ್ತು ದಲಿತ ಕೋಟಾದಲ್ಲಿ ಅರವಿಂದ ಲಿಂಬಾವಳಿ ಅವನ್ನು ಪರಿಗಣಿಸಬಹುದು ಎಂಬ ಅಭಿಪ್ರಾಯವನ್ನೂ ಹೈಕಮಾಂಡ್ ಹೊಂದಿದೆ ಎಂಬುದನ್ನು ನಡ್ಡಾರನ್ನು ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಸ್ವತಃ ಸುನೀಲ್ ಕುಮಾರ್ ಜೊತೆಗೇ ವರಿಷ್ಠರು ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸಿದ್ದರು. ಆದರೆ, ಆಗ ಸುನೀಲ್ ಕುಮಾರ್ ಕಡೆಯಿಂದ ಸ್ಪಷ್ಟ ನಿಲುವು ವ್ಯಕ್ತವಾಗಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಕಳೆದ ಮಂಗಳವಾರವೇ ದೆಹಲಿಗೆ ಹೋಗಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮೂರನೇ ದಿನವೂ ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ. ಅಸಮಾಧಾನಿತರ ಬಣ ಮತ್ತೆ ಬೆಂಗಳೂರಿನಲ್ಲಿ ಸಭೆ ಸೇರಿ ಜುಲೈ ಎರಡನೇ ವಾರದಲ್ಲಿ ನವದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುವ ಚಿಂತನೆಯಲ್ಲಿದೆ. ಇನ್ನು ಆರ್.ಅಶೋಕ್ ಗೆ ಹೈಕಮಾಂಡ್ ಭೇಟಿಗೆ ಸಹ ಅವಕಾಶ ನೀಡಿಲ್ಲ. ಹೀಗಾಗಿ ಆರ್ .ಅಶೋಕ್ ಪ್ರಯತ್ನಗಳು ಈವರೆಗೂ ಸಫಲವಾಗಿಲ್ಲ.
ಇನ್ನು ಆರ್.ಅಶೋಕ್ ರನ್ನು ವಿಪಕ್ಷ ಸ್ಥಾನದಿಂದ ಕೆಳಗಿಳಿಸಿ ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಹೆಗಲಿಗೆ ಜವಾಬ್ದಾರಿ ಏರಬಹುದು ಎಂದೂ ಹೇಳಲಾಗುತ್ತಿದೆ. ಆದರೆ ಅಶೋಕ್ ದೆಹಲಿ ಭೇಟಿಯ ನಿಜವಾದ ಗುಟ್ಟು ಏನೆಂಬುದು ಇನ್ನೂ ಬಹಿರಂಗವಾಗಿಲ್ಲ.
ಇನ್ನು ಹೈಕಮಾಂಡ್ ಹೊಸ ನಾಯಕರನ್ನು ಕರ್ನಾಟಕ ರಾಜಕೀಯದಲ್ಲಿ ಗಟ್ಟಿಯಾಗಿ ನೆಲೆಯೂರಿಸುವ ಪ್ರಯತ್ನದಲ್ಲಿದೆ. ಇದರ ಭಾಗವಾಗಿಯೇ ವಿಜಯೇಂದ್ರ ರವರಿಗೆ ಶಿಕಾರಿಪುರದ ವಿಧಾನಸಭೆ ಟಿಕೇಟ್ ನೀಡಿತ್ತು. ಅಲ್ಪ ಮತದಲ್ಲಿ ಗೆಲವು ಕಂಡು ವಿಜಯೇಂದ್ರ ಶಾಸಕರಾಗಿದ್ದರು. ನಂತರ ಇವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಬೆಂಬಲಿಸಿ ಬೆಳಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ನಾಯಕತ್ವದಲ್ಲಿ ಕಳೆದಬಾರಿ ಕೆಳಮಟ್ಟದ ಸ್ಥಾನಕ್ಕೆ ಇಳಿದಿದೆ. ಇದಾದ ನಂತರ ಬಿಜೆಪಿ ಆಂತರಿಕ ಗುದ್ದಾಟದಲ್ಲಿ ಹಲವು ನಾಯಕರ ಬಣ ಹುಟ್ಟಿಕೊಂಡಿದೆ. ಹೀಗಿರುವಾಗ ವಿಜೆಯೇಂದ್ರ ರವರು ಒಂದಿಷ್ಟು ಸಂಘಟನೆ ಬೆಳಸುವ ಕಾರ್ಯ ಹೈಕಮಾಂಡ್ ಗಮನದಲ್ಲಿದ್ದು ಇದ್ದಿದ್ದರಲ್ಲಿ ವಿಜಯೇಂದ್ರರಿಗೆ ಹಲವು ಕಾರಣದಲ್ಲಿ ಕರ್ನಾಟಕ ಹಲವು ಕ್ಷೇತ್ರದ ಹಿಡಿತ ಹಾಗೂ ತನ್ನದೇ ವರ್ಚಸ್ಸು ಇರುವುದುನ್ನು ಹೈಕಮಾಂಡ್ ಗಮದಲ್ಲಿ ಇಟ್ಟಿಕೊಂಡಿದೆ.
ಮುಂದೆ ಉತ್ತಮ ನಾಯಕ ಸ್ಥಾನ ಗಳಿಸುವ ಅರ್ಹತೆ ಹೊಂದಿರುವ ವಿಜಯೇಂದ್ರ ವಯಸ್ಸು ಚಿಕ್ಕದಾದರೂ ಕಾರ್ಯಗಳು ,ರಾಜಕೀಯ ನಡೆಗಳು ಹೈಕಮಾಂಡ್ ಮನಸ್ಸಿನಲ್ಲಿ ಉತ್ತಮ ಫಲ ನೀಡಿದೆ. ಇನ್ನು ಮೂರು ವರ್ಷದಲ್ಲಿ ಚುನಾವಣೆ ಬರುವ ಕಾರಣ ಈಗ ಬದಲಾವಣೆ ಮಾಡಿದರೇ ಕರ್ನಾಟಕದ ಮಟ್ಟಿಗೆ ಇದು ದೊಡ್ಡ ಪೆಟ್ಟಾಗಬಹುದು ಎಂಬುದು ಹೈಕಮಾಂಡ್ ಚಿಂತಿಸುತ್ತಿದೆ.
ಈ ಎಲ್ಲಾ ಕಾರಣದಲ್ಲಿ ಪಕ್ಷ ಗಟ್ಟಿಗೊಳಿಸುವ ನಿಟ್ಟಿನಲ್ಲಿ ವಿಜಯೇಂದ್ರರವರನ್ನೇ ಮುಂದುವರೆಸುವ ಸಾಧ್ಯತೆ ಇದೆ ಎಂದು ದೆಹಲಿ ಮೂಲದ ಮಾಹಿತಿಯಾಗಿದ್ದು , ವಿರೋಧ ಪಕ್ಷದ ನಾಯಕ ಸೇರಿ ಕೆಲವು ಸ್ಥಾನಗಳ ಬದಲಾವಣೆಯ ಸುಳಿವು ಸಿಕ್ಕಿದೆ.