Sirsi| ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆಗೆ ಬ್ರಷ್ಟಾಚಾರ ಆರೋಪದಡಿ ಶಿಕ್ಷೆ.
ಬಿಜೆಪಿ ಧುರೀಣೆ ,ಜಿ.ಪಂ.ಮಾಜಿ ಸದಸ್ಯೆ ಉಷಾ ಹೆಗಡೆಗೆ 1 ವರ್ಷ ಸಜೆ ಹಾಗೂ 5 ಸಾವಿರ ದಂಡ ವಿಧಿಸಿದ ಕೋರ್ಟ
Sirsi News : ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ ಲೋಕಾಯುಕ್ತ ನ್ಯಾಯಾಲಯ ಒಂದು ವರ್ಷ ಸಜೆ ಹಾಗೂ ಐದು ಸಾವಿರ ರೂ. ದಂಡ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ್ ಈ ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ?
ಉಷಾ ಹೆಗಡೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವ ಮೊದಲು ಶ್ರೀನಗರ ಪಂಚಾಯತ್ ವತಿಯಿಂದ ನಡೆದ ಸಭೆ ಸಮಾರಂಭಗಳಿಗೆ ಅಂಗನವಾಡಿ ಕಾರ್ಯಕರ್ತೆಯಾಗಿ ಹಾಜರಾಗಿ, ಎರಡು ಹುದ್ದೆಗಳನ್ನು ಹೊಂದಿದ್ದರು.
ಜಿ.ಪಂ. ಸದಸ್ಯತ್ವದ ಅಧಿಕಾರದಲ್ಲಿದ್ದಾಗ ಜನವರಿ 2011 ರಿಂದ ನವಂಬರ್ 2012 ರವರೆಗೆ ಅಂಗನವಾಡಿ ಕಾರ್ಯಕರ್ತೆಯೆಂದು ಸರ್ಕಾರದಿಂದ ಗೌರವಧನ 88,630 ಪಡೆದುಕೊಂಡಿದ್ದಾರೆ. ಜನಪ್ರತಿನಿಧಿಯಾದ ನಂತರವೂ ಅಂಗನವಾಡಿ ಕಾರ್ಯಕರ್ತೆಯೆಂದು ಗೌರವಧನ ಪಡೆದು, ಸರ್ಕಾರಕ್ಕೆ ಮೋಸ ಮಾಡಿದ್ದಾಗಿ ಆರೋಪಿಸಲಾಗಿತ್ತು.
ಉಷಾ ರವೀಂದ್ರ ಹೆಗಡೆ ಏಕಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯಯಾಗಿ ಕಾರ್ಯನಿರ್ವಹಿಸಿ, ಜಿಲ್ಲಾ ಪಂಚಾಯತ್ ಬದನಗೋಡ ಕ್ಷೇತ್ರದ ಸದಸ್ಯತ್ವ ಹುದ್ದೆಯನ್ನು ಸರಿಯಾಗಿ ನಿಭಾಯಿಸದೆ ಹಾಗೂ ಅಂಗನವಾಡಿ ಕರ್ತವ್ಯದಲ್ಲಿಯೂ ಸರಿಯಾಗಿ ಹಾಜರಿರದೆ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಾಜರಾತಿ ಪುಸ್ತಕದಲ್ಲಿ ಹಾಜರಿರುವುದಾಗಿ ಸುಳ್ಳು ಸಹಿ ಮಾಡಿದ್ದಾಗಿಯೂ ಮತ್ತು ಈ ಮೂಲಕ ಭಾರತೀಯ ದಂಡ ಸಹಿತ ಕಲಂ 468ರ ಮೇರೆಗೆ ದಂಡನೀಯವಾದ ಅಪರಾಧವನ್ನು ಎಸಗಿದ್ದಾಗಿ ಅರೋಪಿಸಲಾಗಿತ್ತು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಇಬ್ರಾಹಿಂ ನಬಿಸಾಬ್ ದೂರು ನೀಡಿದ್ದರು.
ಲೋಕಾಯುಕ್ತ (lokayuktha) ಪರ ಕಾರವಾರದ (karwar) ಎಲ್.ಎಂ.ಪ್ರಭು ವಾದಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎರಡು ಹುದ್ದೆ ಮಾಡಲು ಬರುವುದಿಲ್ಲ.
ಸರ್ಕಾರದ ಆದೇಶದಂತೆ ಒಂದು ಹುದ್ದೆಗೆ ರಾಜೀನಾಮೆ ನೀಡಿ ಎಂದು ಮೌಖಿಕವಾಗಿ ಹಾಗೂ ಲಿಖಿತವಾಗಿ ಸೂಚಿಸಿದ್ದರೂ , ಉಷಾ ಹೆಗಡೆ ಇಲಾಖೆಯ ಆದೇಶ ಹಾಗೂ ಧಾರವಾಡ ಹೈಕೋರ್ಟ್ ಸಂಚಾರಿ ಪೀಠ ನೀಡಿದ ಆದೇಶವನ್ನು ಧಿಕ್ಕರಿಸಿದ್ದರು. ಈ ಅಂಶಗಳನ್ನು ಜಿಲ್ಲಾ ಪ್ರಧಾನ ಸೆಷನ್ಸ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ನಿನ್ನೆ ತೀರ್ಪು ಪ್ರಕಟಿಸಿದ್ದಾರೆ.