ಸಾಹಿತಿ,ಪತ್ರಕರ್ತ ನಾಗರಾಜ ಹರಪನಹಳ್ಳಿಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಗರಿ
ಸಾಹಿತಿ,ಪತ್ರಕರ್ತ ನಾಗರಾಜ ಹರಪನಹಳ್ಳಿಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಗರಿ
ಕಾರವಾರ : ಅಗಸ್ಟ್ 17 ರಂದು ನಡೆಯಲಿರುವ ಪತ್ರಿಕಾ ದಿನಾಚರಣೆಯಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ಘಟಕದಿಂದ ಕೊಡಮಾಡುವ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ನಾಗರಾಜ ಹರಪನಹಳ್ಳಿ ಅವರನ್ನ ಆಯ್ಕೆ ಸಮತಿಯು ಆಯ್ಕೆ ಮಾಡಿದೆ,
ಅಗಸ್ಟ್ 17ರಂದು ಪತ್ರಿಕಾನಿರ್ವಹಣಾ ಸಮಿತಿ ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ಘಟಕದಿಂದ ಜಂಟಿಯಾಗಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿರುವ ,
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ ಆಯ್ಕೆಗೊಂಡಿರುವ ನಾಗರಾಜ್ ಹರಪನಹಳ್ಳಿ ಅವರು 1998 ರಿಂದ ಪತ್ರಿಕಾರಂಗದಲ್ಲಿದ್ದು, ಜನವಾಹಿನಿ ಪತ್ರಿಕೆಯಲ್ಲಿ 1998-2003 ವರೆಗೆ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಕನ್ನಡ ಜನಾತರಂಗದಲ್ಲಿ ಐದು ವರ್ಷ, ಈಟವಿ ಕನ್ನಡ ವಾಹಿನಿಯಲ್ಲಿ 3ವರ್ಷ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಳಗಾವಿ ಲೋಕದರ್ಶನದಲ್ಲಿ 2010 ರಿಂದ ಜಿಲ್ಲಾ ವರದಿಗಾರರಾಗಿ ಹಾಗೂ ಪ್ರಸ್ತುತ ಉದಯವಾಣಿ ಪತ್ರಿಕೆಗೆ ಕಾರವಾರ ದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತು ಕಾರವಾರ ತಾಲೂಕು ಅಧ್ಯಕ್ಷರಾಗಿ ಒಂದು ಅವಧಿಗೆ ಕಾರ್ಯನಿರ್ವಹಿಸಿದ್ದಾರೆ.
ಕೃತಿಗಳ ಪ್ರಕಟಣೆ:
ಲೇಖಕರಾಗಿರುವ ಹರಪನಹಳ್ಳಿ, 'ಬಿಸಿಲ ಬಯಲ ಕಡಲು' ಕವನ ಸಂಕಲನ, 'ಕಡಲದಂಡೆಗೆ ಬಂದ ಬಯಲು' ಎಂಬ ಕಥಾ ಸಂಕಲನ, 'ವಿರಹಿ ದಂಡೆ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ.
ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿಯವರಾದ ನಾಗರಾಜ್ , 1996 ರಿಂದ ಕಾರವಾರದಲ್ಲಿ ನೆಲಸಿದ್ದಾರೆ.
ಕಳೆದ 27 ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.