Uttara kannda|ಲಾರಿ ಮಾಲಕರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಉತ್ತರ ಕನ್ನಡ ಜಿಲ್ಲಾ ಸಂಘದ ಬೆಂಬಲ
ರಾಜ್ಯ ಲಾರಿ ಮಾಲಕರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಉತ್ತರ ಕನ್ನಡ ಜಿಲ್ಲಾ ಸಂಘದ ಬೆಂಬಲ
ಕಾರವಾರ: ಬೆಲೆ ಏರಿಕೆ ವಿರುದ್ಧ ಕರ್ನಾಟಕ ರಾಜ್ಯ ಲಾರಿ ಮಾಲಕರ ಮತ್ತು ಏಜೆಂಟರ ಸಂಘಗಳ ಒಕ್ಕೂಟ ಕರೆ ನೀಡಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಉತ್ತರಕನ್ನಡ ಜಿಲ್ಲಾ ಲಾರಿ ಮಾಲಕರ ಸಂಘವೂ ಬೆಂಬಲ ಸೂಚಿಸಿದೆ.
ಡೀಸೆಲ್ ಬೆಲೆ ದಿನ ಕಳೆದಂತೆ ಹೆಚ್ಚಾಗುತ್ತಲಿದೆ. ಕಚ್ಚಾ ತೈಲದ ಬೆಲೆ ಇಳಿದರೂ ಡೀಸೆಲ್ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಇಂಧನ ದರ ಹೆಚ್ಚಳವಾದಲ್ಲಿ ಸಾಗಾಣಿಕಾ ವೆಚ್ಚ ಏರುವುದರಿಂದ ಸಾಮಾನ್ಯವಾಗಿ ಅದು ತರಕಾರಿ, ಹಣ್ಣು- ಹಂಪಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಸಾರ್ವಜನಿಕ ಪ್ರಯಾಣಿಕ ವಾಹನಗಳ ಬಾಡಿಗೆ/ ಟಿಕೆಟ್ ದರವೂ ಹೆಚ್ಚಾಗುತ್ತದೆ. ಹೀಗಾಗಿ ತಕ್ಷಣವೇ ಡೀಸೆಲ್ ಬೆಲೆ ಮರುಪರಿಶೀಲನೆ ಮಾಡಿ ಕಡಿಮೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ರಾಜ್ಯದಲ್ಲಿ ಒಟ್ಟಾರೆ 18 ರಾಜ್ಯ ಹೆದ್ದಾರಿ ಟೋಲ್ ಬೂತ್ ಗಳಿವೆ. ಇವುಗಳಿಂದ ಅನಧಿಕೃತವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಚಾಲಕರಿಗೆ ಮೂಲಸೌಕರ್ಯ ಹಾಗೂ ರಸ್ತೆ ಅಪಘಾತ ತಡೆಯದೇ, ಟೋಲ್ ಬೂತ್ ಗಳಿಗೆ ಕೇವಲ ಬಣ್ಣ ಬಳಿದು, ಶುಲ್ಕ ವಸೂಲಿ ಮಾಡುತ್ತಿರುವುದು ಖಂಡನೀಯ. ಟೋಲ್ ಶುಲ್ಕವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಲಾಗಿದೆ.
ಆರ್ ಟಿಓ ಇಲಾಖೆಯ ಬಾರ್ಡರ್ ಚೆಕ್ ಪೋಸ್ಟ್ ಗಳನ್ನು ರದ್ದುಪಡಿಸಬೇಕು. ಏರಿಸಿರುವ ಎಫ್ಸಿ ಶುಲ್ಕವನ್ನು ರದ್ದುಪಡಿಸಬೇಕು. ಬೆಂಗಳೂರು ಸೇರಿ ರಾಜ್ಯದ ಹಲವು ನಗರದ ಒಳಗಡೆ ಸರಕು ಸಾಗಾಣೆ ವಾಹನಗಳನ್ನು ನಿಷೇಧಿಸಿ ಐದು ಗಂಟೆ ಮಾತ್ರ ಸಮಯ ನೀಡಲಾಗಿದೆ. ಈ ಆದೇಶವು ಲಾರಿ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆದ್ದರಿಂದ, ‘ನೋ ಎಂಟ್ರಿ’ ಹೆಸರಿನಲ್ಲಿ ಪೊಲೀಸರು ಚಾಲಕರಿಗೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ತಡೆಯಬೇಕು ಎಂದು ಮನವಿ ಮಾಡಲಾಗಿದೆ.
ಈ ಬೇಡಿಕೆಗಳನ್ನು ಈಡೇರಿಸುವವರೆಗೆ ಲಾರಿಗಳು ನಿಂತಲ್ಲೇ ನಿಂತು ಮಾಲಕರು ಮತ್ತು ಚಾಲಕರು ಮುಷ್ಕರ ನಡೆಸಲಿದ್ದಾರೆ. ಇದರಿಂದ ನಾಡಿನ ವ್ಯಾಪಾರ ವ್ಯವಹಾರಗಳಿಗೆ, ಸಾರ್ವಜನಿಕ ಸೇವೆಗಳಿಗೆ ಅಡೆತಡೆಯುಂಟಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಉತ್ತರಕನ್ನಡ ಜಿಲ್ಲಾ ಲಾರಿ ಮಾಲಕರ ಅಸೋಸಿಯೇಷನ್ ಅಧ್ಯಕ್ಷ ಮಾಧವ್ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರವಾರ ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಸಂತೋಷ್ ನಾಯ್ಕ ಹಾಗೂ ಅಂಕೋಲಾ ಟೆಂಪೋ ಯೂನಿಯನ್ ಅಧ್ಯಕ್ಷ ಕಿಶೋರ್ ನಾಯ್ಕ ಅವರು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಎಲ್ಲಾ ಲಾರಿ, ಟೆಂಪೋ- ಟ್ಯಾಕ್ಸಿ ಮಾಲಕರು ಹಾಗೂ ಚಾಲಕರು ಮತ್ತು ಸಾರ್ವಜನಿಕರೂ ಈ ಮುಷ್ಕರಕ್ಕೆ ಬೆಂಬಲ ಸೂಚಿಸಲು ಅವರು ಈ ಮೂಲಕ ಕೋರಿದ್ದಾರೆ.