Bhatkal:ಭಟ್ಕಳ ಮನೆಯ ಮುಂದಿಟ್ಟ ಕಾರು ಕಳ್ಳತನ - ಆರೋಪಿಗಳ ಬಂಧನ
Bhatkal:ಭಟ್ಕಳ ಮನೆಯ ಮುಂದಿಟ್ಟ ಕಾರು ಕಳ್ಳತನ - ಆರೋಪಿಗಳ ಬಂಧನ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ(bhatkal) ದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಕಳವಾಗಿದ್ದ ಪ್ರಕರಣದಲ್ಲಿ ಭಟ್ಕಳ ಶಹರ ಠಾಣೆ ಪೊಲೀಸರು ಕೇವಲ 48 ಗಂಟೆಗಳೊಳಗೆ ಕಳವಾದ ಡಿಜೈರ್ ಕಾರು ಪತ್ತೆ ಹಚ್ಚಿ, ಇಬ್ಬರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:-Bhatkal:ಭಟ್ಕಳ ನಗರವನ್ನು 24 ಗಂಟೆಯಲ್ಲಿ ಸ್ಪೋಟಿಸುವುದಾಗಿ ಪೊಲೀಸ್ ಠಾಣೆಗೆ ಇಮೇಲ್ ಬೆದರಿಕೆ ಹಾಕಿದ ಇಬ್ಬರು ವಶಕ್ಕೆ
ಮುಟ್ಟಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರವಿರುವ ಶೇಖರ ಸೋಮಯ್ಯ ನಾಯ್ಕ ಎಂಬುವವರಿಗೆ ಸೇರಿದ ಮಾರುತಿ ಡಿಜೈರ್ ಕಾರು ಜುಲೈ 13ರಂದು ಬೆಳಿಗ್ಗೆ 4 ಗಂಟೆಗೆ ಕಳವಾಗಿತ್ತು. ತಕ್ಷಣವೇ ಶೇಖರ ಶಹರ ಠಾಣೆಗೆ ದೂರು ನೀಡಿದ್ದು, ಪಿಎಸ್ಐ ತಿಮ್ಮಪ್ಪ ಬೆಡುಮನೆ ಅವರ ತನಿಖೆ ಕೈಗೊಂಡು ಶಿರೂರು ಟೋಲ್ ಗೇಟ್ ಮಾರ್ಗವಾಗಿ ಕಾರು ಹಾದುಹೋಗಿರುವುದು ದೃಢವಾಗುತ್ತಿದ್ದಂತೆಯೇ, ಶಹರ ಠಾಣೆಯ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ. ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ಬೈಂದೂರು, ಉಡುಪಿ ಹಾಗೂ ಮಂಗಳೂರು ಕಡೆಗೆ ಕಳಿಸಲಾಗಿತ್ತು.
ಜುಲೈ 15ರಂದು ಮಧ್ಯಾಹ್ನ ಬೈಂದೂರಿನ ರೈಲ್ವೆ ನಿಲ್ದಾಣ ಕ್ರಾಸ್ ಬಳಿ ಆರೋಪಿಗಳಾದ ಫೌಜಾನ್ ಅಹ್ಮದ್ (20) ಬದ್ರಿಯಾ ಕಾಲೋನಿ ನಿವಾಸಿ ಹಾಗೂ ದರ್ಶನ ನಾಯ್ಕ (18) ವೆಂಕಟಾಪುರ,ಇವರನ್ನು ಕಾರು ಸಹಿತ ಬಂಧಿಸಲಾಗಿದೆ.ಬಂಧಿತ ಫೌಜಾನ್ ಹಿಂದೆ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಕ್ಕೆ ಜೈಲುಪಾಲಾಗಿ, ಜಾಮೀನಿನಲ್ಲಿ ಹೊರಬಂದು ಮತ್ತೆ ಕಳ್ಳತನ ಆರಂಭಿಸಿದ್ದ.
ಇದೀಗ ಮತ್ತೆ ಬಂಧನಕ್ಕೊಳಗಾಗಿ ಪೊಲೀಸ್ ಅತಿಥಿ ಆಗಿದ್ದಾನೆ.ಕಾರ್ಯಾಚರಣೆಯಲ್ಲಿ ಶಾಂತಿನಾಥ ಪಾಸಾನೆ, ನವೀನ್ ನಾಯ್ಕ,ದೀಪಕ ನಾಯ್ಕ,ದಿನೇಶ್ ನಾಯಕ,
ವಿನಾಯಕ ಪಾಟೀಲ್,ದೇವು ನಾಯ್ಕ ಮಹಾಂತೇಶ ಹಿರೇಮಠ,ವೀರಣ್ಣಾ ಬಳ್ಳಾರಿ, ಕಾಶಿನಾಥ ಕೊಟಗೊಣಸಿ,ರೇವಣಸಿದ್ದಪ್ಪ ಮಾಗಿ,ಚಂದ್ರಕಾಂತ ಕುಂಬಾರ ಹಾಗೂ ಕಾರವಾರದ ಟೆಕ್ನಿಕಲ್ ಸೆಲ್ನ ಉದಯ ಗುನಗಾ, ಬಬನ್ ಕದಂಗ್ ಪಾಲ್ಗೊಂಡಿದ್ದರು.ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ. ನಾರಾಯಣ, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಮತ್ತು ಡಿವೈಎಸ್ಪಿ ಮಹೇಶ್ ಎಂ.ಕೆ.ಮಾರ್ಗದರ್ಶನ ನೀಡಿದವರು.